Showing posts with label Announcements. Show all posts
Showing posts with label Announcements. Show all posts

Thursday, March 28, 2019

ಹಾಗೇ ಒಂದು ವಿಭಿನ್ನ ಚಲನಚಿತ್ರ ’ಗಂಧದ ಕುಡಿ’ಯ ಇಣುಕುನೋಟ

ಮಿತ್ರ ಅನಂತ ನಾಯಕ್ ಸಗ್ರಿ ಅವರು 2016ರಲ್ಲಿ ನಮ್ಮನೆಗೆ ಭೇಟಿ ನೀಡಿದಾಗ ಅವರ ಕುರುಚಲು ಕೂದಲು, ನೀಳ ದಾಡಿ ಕಂಡು ಹೌಹಾರಿದೆ!

ನನ್ನ ಹಾವಭಾವವನ್ನು ಕಂಡ ಅನಂತ ನನ್ನ ಕಿವಿಯಲ್ಲಿ ಪಿಸುಗುಟ್ಟಿದರು -

"ಒಂದು  ಕನ್ನಡ ಮಕ್ಕಳ ಚಲನಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕ,  ನಮ್ಮೂರಿನವರೇ ಆದ ಸತ್ಯೇಂದ್ರ ಪೈ ಅವರಿಂದ ಆಹ್ವಾನ ಬಂದಿದೆ. ಕಥಾವಸ್ತು ಚೆನ್ನಾಗಿದೆ. ಒಪ್ಪಿದ್ದೇನೆ. ಚಿತ್ರದ ಹೆಸರು ’ಗಂಧದ ಕುಡಿ’. ನನ್ನದು ಒಬ್ಬ ವಿಜ್ಞಾನಿಯ ಪಾತ್ರ. ನೈಜತೆಯಿಂದ ಪಾತ್ರ ನಿಭಾಯಿಸಲೆಂದೇ ದಾಡಿ, ಕುರುಚಲು ಕೂದಲು ಬೆಳೆಸಿದ್ದೇನೆ!".

ಅನಂತ ಅವರು ಒಂದೆರಡು ಚಲನಚಿತ್ರಗಳಲ್ಲಿ ಹಾಗೂ ತಮ್ಮ ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದು ನನಗೆ ಗೊತ್ತು. ಇತ್ತೀಚೆ ಬಿಡುಗಡೆಗೊಂಡ ಕೊಂಕಣಿ ಚಿತ್ರದಲ್ಲೂ ಅವರ ನಟನಾ ಕೌಶಲತೆನ್ನು  ಕಂಡಿದ್ದೇನೆ.

ಹಾಗೆ ಅವರಿಗೆ ಶುಭ ಹಾರೈಸಿದ ನಾನು, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಕೇಳಿ ಪಡಕೊಂಡೆ. ಕಥೆ ಕೇಳುತ್ತಾ ಕೇಳುತ್ತಾ ಇದೊಂದು ವಿಭಿನ್ನ ಕಥಾವಸ್ಥು ಹೊಂದಿರುವ ಚಿತ್ರ ಮಾತ್ರವಲ್ಲದೇ ಪರಿಸರ ಸಂರಕ್ಷಣೆಯ ಬಗ್ಯೆ ನಿರ್ಮಾಪಕರು, ನಿರ್ದೇಶಕರಿಗಿದ್ದ ಕಾಳಜಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡೆ.

ದಿನಗಳು, ತಿಂಗಳುಗಳು, ವರ್ಷಗಳು ಉರುಳಿದರೂ ಚಲನಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವ ಸುದ್ಧಿ ಕಾಣಲಿಲ್ಲ. ಯೂಟ್ಯೂಬ್ ಹಾಗೂ ಫೇಸ್‍ಬುಕ್ ಸಾಮಾಜಿಕ ತಾಣಗಳಲ್ಲೊಂದಿಷ್ಟು ಚಟುವಟಿಕೆಗಳು ಕಂಡು ಬಂದುವು.

ಚಲನಚಿತ್ರದ ಶೂಟಿಂಗ್ ಸಂಪೂರ್ಣಗೊಳಿಸಿ ನಂತರ ಜಾಹೀರಾತಿಗೋಸ್ಕರ ಕಳೆದ ವರ್ಷ ಜೂನ್ 1ರಂದು ಉಜಿರೆಯ ಎರ್ಮಾಯಿ ಜಲಪಾತದ ಬಳಿ ನವೀನ ಶೈಲಿಯ ಚಿತ್ರೀಕರಣ ನಡೆಸುತ್ತಿದ್ದಾಗ "ಮಂಗಲ್ ಪಾಂಡೇ", "ಜೋಧಾ ಅಕ್ಬರ್" ಚಿತ್ರದ ಕಲಾ ನಿರ್ದೇಶಕ, "ಕಣ್ಣು ತೆರೆದಾಗ" ಖ್ಯಾತಿಯ ಯುವ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಅವರು ಹಠಾತ್ ಕಾಲು ಜಾರಿ ಬಿದ್ದು ಜಲಸಮಾಧಿಯಾಗಿ ತೀರಿಕೊಂಡ ದುರಂತಮಯ ಸುದ್ಧಿಯನ್ನೂ ಓದಿದೆ.

ಪರಿಸರದ ಬಗ್ಗೆ, ಮಕ್ಕಳ ಬಗ್ಗೆ ಇಷ್ಟೊಂದು ಕಾಳಜಿ, ಉತ್ಸಾಹ ಹೊಂದಿದ ನಮ್ಮ ನೆರೆಜಿಲ್ಲೆ ಉಡುಪಿಯವರಾದ ಅದೂ ನಮ್ಮ ಕೊಂಕಣಿ ಗೌಡ ಸಾರಸ್ವತ ಸಮಾಜದ ಉದ್ಯಮಿ ಸಹೋದರರಾದ ಸತ್ಯೇಂದ್ರ ಪೈ-ಕೃಷ್ಣಮೋಹನ್ ಪೈ ಅವರ ಕನಸಿನ ಚಲನಚಿತ್ರ "ಗಂಧದ ಕುಡಿ" ಬೆಳೆದು ಮರವಾಗುವ ಮುಂಚೆಯೇ ತನ್ನದೇ ಕೈಗೂಸಿನಂತೆ ಅದರ ಆರೈಕೆ ಮಾಡುತ್ತಿದ್ದ ನಿರ್ದೇಶಕ ಸಂತೋಷ್ ಅವರು ಫಕ್ಕನೇ ಕಣ್ಮರೆಯಾಗಿ ಚಿತ್ರದ ಬಿಡುಗಡೆಗೆ ಹತ್ತು ಹಲವು ವಿಘ್ನಗಳೆದುರಾದವಲ್ಲಾ ಎಂದು ಮರುಗಿದೆ.

ಅನಂತ ಅವರಲ್ಲಿ ಚಿತ್ರದ ಭವಿಷ್ಯದ ಬಗ್ಗೆ ಪದೇಪದೇ ಕೇಳುವ ಮನಸ್ಸಾಗಲಿಲ್ಲ.

ಸ್ಥೈರ್ಯ ಬಿಡದ ನಿರ್ಮಾಪಕರು ಹಾಗೂ ತಾಂತ್ರಿಕ ವರ್ಗದವರು ಸೇರಿ ಕೊನೆಗೂ ಚಲನಚಿತ್ರ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದರು ಮಾತ್ರವಲ್ಲ, ಚಿತ್ರವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 21 ಪ್ರಶಸ್ತಿ ಪಡೆಯುವಲ್ಲಿ ಸಫಲವಾಯಿತು! ಚಿತ್ರದ ಟ್ರೈಲರ್ ಕೂಡಾ ಯೂಟ್ಯೂಬ್‍ನಲ್ಲಿ ಪ್ರತ್ಯಕ್ಷವಾಯಿತು.

ಹಾಗೇ ಒಂದು ವಾರ ಹಿಂದೆ ಅನಂತ ಅವರು ವಾಟ್ಸಪ್ ಸಂದೇಶದಲ್ಲಿ, ಮಾರ್ಚ್ 29ರಂದು ಉದ್ದೇಶಿದ ಚಲನಚಿತ್ರದ ಬಿಡುಗಡೆಗೆ ಪೂರಕವಾಗಿ ಮಾರ್ಚ್ 24ರಂದು ನಮ್ಮೂರಿನ ಕೆನರಾ ಸಿ.ಬಿ.ಎಸ್.ಇ. ಶಾಲೆಯ ಸುಕ್ರತೀಂದ್ರ ಕಲಾ ಮಂದಿರದಲ್ಲಿ ಜರುಗುವ ವೈಭವೋಪೇತ ತಾರೆಯರ ಸಮಾಗಮದಿಂದ ವಿಜ್ರಂಭಿತ "ಗಂಧದ ಕುಡಿ ಕಲರವ" ವಿಶೇಷ ಕಾರ್ಯಕ್ರಮಕ್ಕೆ ನನ್ನನ್ನು ಆಮಂತ್ರಿಸಿದ್ದರು, ಅಲ್ಲದೇ ಹಿಂದಿನ ದಿನ ಅಂದರೆ ಮಾರ್ಚ್ 23ರಂದು ಫೋನ್ ಕರೆ ಮಾಡಿ ಮಾರನೇ ದಿನ ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಪತ್ನಿ ಸಮೇತನಾಗಿ ಬರಬೇಕು ಎಂದು ವಿನಂತಿಸಿದರು. ಅವರೊಂದಿಗಿನ ಆತ್ಮೀಯತೆ ನನ್ನನ್ನು ಸಪತ್ನಿಕನಾಗಿ ಆ ಕಾರ್ಯಕ್ರಮವನ್ನು ವೀಕ್ಷಿಸಲು ಅಯಸ್ಕಾಂತದಂತೆ ಸೆಳೆಯಿತು!

ಭಾನುವಾರ ಮಾರ್ಚ್ 24ರಂದು ಸಾಯಂಕಾಲ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ ನಮ್ಮನ್ನು ಅನಂತ ಅವರು ಎದುರುಗೊಂಡು ತುಂಬುಹೃದಯದ ಸ್ವಾಗತ ನೀಡಿ, ತಂಪು ಪಾನೀಯ ಕುಡಿಸಿ, ಒಳಗೆ ಕರೆದೊಯ್ದು ನಿರ್ಮಾಪಕ ಸತ್ಯೇಂದ್ರ ಪೈ ಅವರಿಗೆ ನನ್ನನ್ನು ಪರಿಚಯಿಸಿ, ಪ್ರಶಸ್ತ ಆಸನದಲ್ಲಿ ಕುಳ್ಳಿರಿಸಿದರು. ಸಭಾಂಗಣ ಆಗಲೇ ನೂರಾರು ಸಭಿಕರಿಂದ ಕಿಕ್ಕಿರಿದಿತ್ತು!

ಸಭೆ ಸಮಾರಂಭಗಳ ಸುದ್ಧಿ ಬಿತ್ತರಿಸಿ ಅನುಭವವಿದ್ದ ನನಗೆ ಕೂತಲ್ಲಿ ಕೂರಲಾಗದೇ ಮೊಬಾಯ್ಲ್ ಕ್ಯಾಮರಾ ಕ್ಲಿಕ್ಕಿಸುತ್ತ ದೃಶ್ಯಗಳನ್ನು ಸೆರೆ ಹಿಡಿಯುತ್ತಾ ಅತ್ತಿತ್ತ ಅಡ್ದಾಡಿದೆ.
ಕನ್ನಡ ಚಿತ್ರರಂಗದ ದಿಗ್ಗಜ ನಟ ದೊಡ್ಡಣ್ಣ, ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ ಹಿರಿಯ ನಟ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ಮುಖ್ಯಪಾತ್ರ ವಹಿಸಿದ ಬಾಲ ಕಲಾವಿದೆ ನಿಧಿ ಶೆಟ್ಟಿ, ಇತರ ಕಲಾವಿದರು, ತಾಂತ್ರಿಕ ತಂಡ ಹಾಗೂ ಮಿಸಸ್ ಇಂಡಿಯಾ ಕರ್ನಾಟಕ 2017 ತೃಪ್ತಿ ರಾವ್ ಅವರನ್ನು ಅತೀ ಸಮೀಪದಿಂದ ಕಂಡು ಅವರ ಭಾವಚಿತ್ರಗಳನ್ನೂ ಸೆರೆ ಹಿಡಿಯುವ ಅವಕಾಶ ಗಿಟ್ಟಿಸಿಕೊಂಡೆ. ನಿರ್ಮಾಪಕ ಸತ್ಯೇಂದ್ರ ಪೈ, ಕೊಂಕಣಿ ಕನ್ನಡ ತುಳು ಚಿತ್ರರಂಗದ ಹಿರಿಯ ಕಲಾವಿದ ದಿನೇಶ್ ಪ್ರಭು, ಹಾಗೂ ಕೊಂಕಣಿ, ಕನ್ನಡ ಮಲಯಾಳಂ ಕಲಾವಿದ ಕಾಸರಗೋಡು ಅಶೋಕ್ ಕುಮಾರ್ ಜೊತೆ ಒಂದು ಚಿತ್ರ ಕ್ಲಿಕ್ಕಿಸಿಕೊಂಡೆ!

ವೇದಿಕೆ ಮೇಲೆ ನಿರಂತರ ಸುಂದರ ಯುವಕ ಯುವತಿಯರ ಹಾಡು ನೃತ್ಯ, ಮಿಮಿಕ್ರಿ, ನಗೆಹಬ್ಬ ನಡೆಯುತ್ತಾ ವೀಕ್ಷಕರನ್ನು ಸುಮಾರು ಎರಡು ಗಂಟೆ ಕಾಲ ಮನರಂಜಿಸಿದುವು. ನಂತರ ಎಲ್.ಇ.ಡಿ. ಪರದೆ ಮೇಲೆ ಚಲನಚಿತ್ರದ ಟ್ರೈಲರ್ ಪ್ರದರ್ಶಿಸಲು, ವೀಕ್ಷಕರು ಪ್ರಚಂಡ ಕರತಾಡನ ಮಾಡಿ ಮೆಚ್ಚುಗೆ ಸೂಸಿದರು.
ಸಮಾರಂಭದ ಒಂದು ವೀಡಿಯೋ ದೃಶ್ಯ
"ಗಂಧದ ಕುಡಿ" ಚಲನಚಿತ್ರದ ಟ್ರೈಲರ್
ವೇದಿಕೆ ಮೇಲೆ ದ.ಕ. ಜಿಲ್ಲಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ಮತ್ತವರ ತಂದೆಯವರು, ನಿರ್ಮಾಪಕರು, ನಟರು, ನಿರ್ದೇಶಕ, ತಾಂತ್ರಿಕ ವರ್ಗದವರು, ರೂಪದರ್ಶಿಗಳು, ಹಿತೈಷಿಗಳು, ಕೆನರಾ ಶಾಲಾ ಸಮಿತಿಯ ಖಜಾಂಚಿ ವಾಮನ್ ಕಾಮತ್ ಹಾಗೂ ಇತರರು ಅಪಾರ ಸಂಖ್ಯೆಯಲ್ಲಿ ಸೇರಿ, ಅಗಲಿದ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ದೀಪ ಬೆಳಗಿಸಿ ಸಭಾ ಸಮಾರಂಭ ಉದ್ಘಾಟನೆ ಮಾಡಿ, ತಂತಮ್ಮ ಅನ್ನಿಸಿಕೆ ಅನುಭವಗಳನ್ನು ಹಂಚಿಕೊಂಡರು. ಹಿತೈಷಿಗಳು ಚಲನಚಿತ್ರದ ಯಶಸ್ಸಿಗಾಗಿ ಶುಭ ಹಾರೈಕೆ ಮಾಡಿ, ಪರಿಸರ ಪ್ರಜ್ಞೆಯುಳ್ಳ ಕಥಾವಸ್ತುವಿನ ಮೇಲಾಧಾರಿತ ಈ ಮಕ್ಕಳ ಚಲನಚಿತ್ರವನ್ನು ನೋಡಿ, ಯುವಜನರಿಗೆ ನೀಡುವ ಸಂದೇಶವನ್ನು ಎಲ್ಲರೂ ಎಲ್ಲೆಡೆ ಬಿತ್ತರಿಸಿದಲ್ಲಿ, ಅದೇ ನಿರ್ಮಾಪಕ ವರ್ಗದವರಿಗೆ ಸಲ್ಲುವ ದೊಡ್ದ ಆದರ ಗೌರವ, ಪ್ರಶಸ್ತಿ ಎಂದು ಅಭಿಪ್ರಾಯ ಪಟ್ಟರು.

ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತವಾಯಿತು.
ನಾಳೆ, ಮಾರ್ಚ್ 29ರಂದು ಕರ್ನಾಟಕ ರಾಜ್ಯದಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಒಮ್ಮೆಲೇ ಬಿಡುಗಡೆಯಾಗುತ್ತಿರುವ "ಗಂಧದ ಕುಡಿ" ಮಕ್ಕಳ ಚಿತ್ರವನ್ನು ನೀವೂ ಒಮ್ಮೆ ನೋಡಿ, ಇತರರನ್ನೂ ನೋಡಲು ಪ್ರೇರೇಪಿಸಿ, ಎಂದು ನನ್ನ ಕಳಕಳಿಯ ನಿವೇದನೆ, ಹಾಗೂ ಚಿತ್ರದ ಯಶಸ್ಸಿಗಾಗಿ ಹೃತ್ಪೂರ್ವಕ ಶುಭ ಹಾರೈಕೆ.

ನಾನಂತೂ ಈ ವಾರದಲ್ಲೇ ಟಿಕೆಟ್ ಖರೀದಿಸಿ "ಗಂಧದ ಕುಡಿ" ನೋಡುವ ಯೋಜನೆ ಹಾಕಿಕೊಂಡಿದ್ದೇನೆ.

ನೀವು?

ವಿಶೇಷ  ಧನ್ಯವಾದಗಳು: ಚಿತ್ರಗಳು ಪೋಸ್ಟರ್‍ಗಳು ಹಾಗೂ ಟ್ರೈಲರ್ ವಿಡಿಯೋ ಕೊಂಡಿಗಾಗಿ, "ಗಂಧದ ಕುಡಿ" ನಿರ್ಮಾಪಕ ವರ್ಗಕ್ಕೆ.

Saturday, June 7, 2014

Fundastic Feelings

WELCOME

Being born to parents who lived meaningfully and spread happiness, I too believe in such stupidity. Hence many of my blogs open my mental cesspool and display the flow of rampant, insane thoughts within.

Indulge in pure clean unadulterated true stories, fiction, features, travelogues, poetry and other nonsense in many languages, that are presented without any fancy package!

In the deal, I may quote a few familiar names or persons without malice towards anyone, taking utmost care to maintain their privacy and prestige.

Yours Truly,
Kudpi Rajanikanth Shenoy